Inaugurate BMTC Depot ‘ಬಿಎಂಟಿಸಿ ಡಿಪೊ ಉದ್ಘಾಟಿಸಿ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಮನವಿ ಪ್ರಜಾವಾಣಿ ವಾರ್ತೆ Updated: 15 ಜುಲೈ 2021, 09:36 IST ಅಕ್ಷರ ಗಾತ್ರ :ಆ |ಆ |ಆ ವಿಜಯಪುರ: ದೇವನಹಳ್ಳಿ ಪಟ್ಟಣದಲ್ಲಿ ನಿರ್ಮಾಣ ಮಾಡಿರುವ ಬಿಎಂಟಿಸಿ ಬಸ್ ಡಿಪೊ ಕಟ್ಟಡವನ್ನು ಉದ್ಘಾಟಿಸಿ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಬೆಂಗಳೂರಿನ ವಿಕಾಸಸೌಧದಲ್ಲಿರುವ ಸಚಿವ ಲಕ್ಷ್ಮಣ್ ಸಂಗಪ್ಪ ಸವದಿ ಅವರ ಕಚೇರಿಯಲ್ಲಿ ಮನವಿ ಸಲ್ಲಿಸಿರುವ ಅವರು, ಡಿಪೊ ನಿರ್ಮಾಣ ಮಾಡಿ ಹಲವು ವರ್ಷಗಳೇ ಕಳೆದಿದ್ದರೂ ಹಲವಾರು ಕಾರಣಗಳಿಂದಾಗಿ ಉದ್ಘಾಟನೆಗೊಳ್ಳದೆ ನನೆಗುದಿಗೆ ಬಿದ್ದಿದೆ. ಇದರಿಂದ ಈ ಭಾಗದಿಂದ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರು ಸಾರಿಗೆ ಬಸ್ಗಳನ್ನೇ ಅವಲಂಬಿಸಬೇಕಾಗಿದೆ. ಇದರಿಂದಾಗಿ ಸಾರಿಗೆ ಬಸ್ಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರು. ತಾಲ್ಲೂಕಿನಲ್ಲಿ ಎರಡು ಪುರಸಭೆಗಳಿವೆ. ವಿಜಯಪುರ ಪಟ್ಟಣದಲ್ಲಿ ಸಾರಿಗೆ ಇಲಾಖೆಯ ಡಿಪೊ ನಿರ್ಮಾಣಕ್ಕೆ 4 ಎಕರೆ ಭೂಮಿ ಮಂಜೂರು ಮಾಡಿದ್ದು, ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಇದುವರೆಗೂ ಡಿಪೊ ನಿರ್ಮಾಣ ಸಾಧ್ಯವಾಗಿಲ್ಲ. ಇದಕ್ಕೆ ಅನುದಾನ ಬಿಡುಗಡೆ ಮಾಡಿಕೊಡಬೇಕು ಎಂದು ಕೋರಿದರು. ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿಯೇ ಇರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ವಿಜಯಪುರದಲ್ಲಿ ಹೈಟೆಕ್ ಬಸ್ನಿಲ್ದಾಣ ನಿರ್ಮಾಣ ಮಾಡಬೇಕಾಗಿದೆ ಎಂದು ಮನವಿ ಸಲ್ಲಿಸಿದರು. ದೇವನಹಳ್ಳಿ ಹಾಗೂ ವಿಜಯಪುರ ಪಟ್ಟಣಕ್ಕೆ ಹೈಟೆಕ್ ಬಸ್ನಿಲ್ದಾಣವನ್ನು ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡಬೇಕು. ಚನ್ನರಾಯಪಟ್ಟಣದ ಸರ್ವೇ ನಂ. 183ರಲ್ಲಿ 5 ಎಕರೆ ಜಮೀನನ್ನು ಕಾಯ್ದಿರಿಸಲಾಗಿದ್ದು, ಇಲ್ಲಿಯೇ ಕೌಶಲಾಭಿವೃದ್ಧಿ ಕಾಲೇಜು ನಿರ್ಮಾಣ ಮಾಡಬೇಕು. ಇದರಿಂದ ಅನೇಕ ಜನರಿಗೆ ಅನುಕೂಲವಾಗಲಿದೆ ಎಂದು ಕೋರಿದ್ದಾರೆ.